ನಾದಲೀಲೆ / Naadaleele
Author: Da.Ra.Bendre
Pages:96
Edition: 2003
Book Size: 1/8th Demmy
Binding: Paper Back
Publisher: Shreematha Prakashana
Description
ನಾದಲೀಲೆ / Naadaleele – “ನಾದಲೀಲೆ” ಎಂಬುದು ಪ್ರಸಿದ್ಧ ಕನ್ನಡ ಕವಿ ಡಾ. ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಅವರ ಜನಪ್ರಿಯ ಕವನ ಸಂಕಲನವಾಗಿದೆ. ಇದನ್ನು ಡಾ. ವಾಮನ ಬೇಂದ್ರೆ ಅವರು ಸಂಪಾದಿಸಿದ್ದಾರೆ. ಬೇಂದ್ರೆಯವರ ’ನಾದಲೀಲೆ’ ಸಂಕಲನದಲ್ಲಿ ೫೦ ಕವಿತೆಗಳಿವೆ. ಈ ಸಂಕಲನವನ್ನು ಬೇಂದ್ರೆಯವರು ’ಶ್ರೀ’ ಯವರಿಗೆ ಆದರಪೂರ್ವಕವಾಗಿ ಅರ್ಪಿಸಿದ್ದಾರೆ. ’ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ/ ಕಲ್ಲುಸಕ್ಕರೆಯಂತ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ’ ಎಂದು ಪ್ರಾರ್ಥಿಸುವ ಕವಿ ’ಶುಭನುಡಿಯೇ ಶಕುನದ ಹಕ್ಕ” ಎಂದು ಹೇಳಬಲ್ಲರು. ಹಾಗೆಯೇ ಮಲ್ಲಾಡ ಗಿಣಿಯೇ ನಿನಿಲ್ಲಲ್ಲಾಡದ ಕುಳಿತಿಯಾಕ ಯೇ ಗಿಣಿಯೇ’ ಎಂದು ಕೇಳಬಲ್ಲರು.’ಹಾರಗುದುರಿ ಬೆನ್ನಯೇರಿ ಸ್ವಾರರಾಗಿ ಕೂತುಹಂಗ/ ದೂರ ದೂರಾ ಹೋಗುಣಂತ ಯಾರಿಗೂ ಹೇಳೋಣು ಬ್ಯಾಡಾ’ ಎನ್ನುವ ಕವಿ ’ಭೂಮಿತಾಯಿಯ ಚೊಚ್ಚಲ ಮಗನನ್ನು ಕಣ್ತೆರೆದು ಒಮ್ಮೆ ನೋಡಿದಿರೇನು’ ಎಂದು ಪ್ರಶ್ನಿಸುತ್ತಲೇ ಕುಣಿಯುವ ಕುರುಡು ಕಾಂಚಾಣದ ಅರ್ಭಟವನ್ನು ಚಿತ್ರವತ್ತಾಗಿ ದಾಖಲಿಸಿದ್ದಾರೆ. ಉತ್ತರ ಧ್ರುವದಿಂ, ದಕ್ಷಿಣ ಧ್ರುವಕೂ ಬೀಸುವ ಚುಂಬಕ ಗಾಳಿಯು ಬಿದಿಗೆಯ ಬಿಂಬಾದರದಲ್ಲಿ ಇಂದಿಗೂ ಮಿಲನದ ಚಿಹ್ನವು ತೊರದಿದೆ ಎನ್ನುತ್ತಾರೆ. ನೀ ಹಿಂಗ ನೋಡಬ್ಯಾಡ ನನ್ನ ಎಂದು ವಿಷಾದದಿಂದ ನುಡಿಯುವ ಕವಿಯು , ’ನಾನು ಬಡವಿ ನೀನು ಬಡವ ಒಲವೇ ನಮ್ಮ ಬದುಕು ಬಳಸಿಕೊಂಡೆವದನೆ ಅವನೇ ನಾವು ಅದಕೂ ಇದಕೂ ಎದಕು’ ಎನ್ನಬಲ್ಲರು. ’ಬಂತಿದೋ ಶೃಂಗಾರ ಮಾಸ’ ಎಂದು ಸಂಭ್ರಮಿಸುವ ಕವಿಯು ’ಬೆಳದಿಂಗಳ ನೋಡಾ’ ಎಂದು ಅಂಬಿಕಾತನಯನ ಹಾಡನ್ನು ತೋರಿಸುತ್ತಾರೆ. ಭೃಂಗದ ಬೆನ್ನೇರಿ ಬರುವ ಕವಿಯ ಕಲ್ಪನಾ ವಿಲಾಸ ಮಸೆದ ಗಾಳಿಯ ಪಕ್ಕ ಸಹಜ ಪ್ರಾಸ ಪಡೆಯುತ್ತದೆ. ಹಾಗೆಯೇ ಒಂದು ಮಂದಹಾಸ ಮಿಂಚಿ ಮಾಯವಾಗುತ್ತದೆ. ’ತೀವ್ರವಾದ ರಸಾನುಭವವುಳ್ಳ ಕವಿಗೆ ವಿಚಾರ ಶಕ್ತಿಯಿಲ್ಲದೇ ಹೋಗಬಹುದು. ಆದರೆ ಬೇಂದ್ರೆಯವರಿಗೆ ಅನುಭವದ ತೀವ್ರತೆಗೆ ಸಮಾನಗಿ ನಿಶಿತವಾದ ವಿಚಾರ ಶಕ್ತಿ ಇದೆ. ಅವರು ತಮ್ಮ ಅನುಭವವನ್ನು, ಎಳೆ ಎಳೆಯಾಗಿ ಬಿಡಿಸಬಲ್ಲರು, ತೋರಿಸಬಲ್ಲರು. ನಿಶಿತವಾಗಿರುವ ಈ ವಿಚಾರ ಕ್ಷೇತ್ರವೂ ವಿಸ್ತಾರವಾಗಿದೆ. ಅವರು ಎಷ್ಟು ಅನುಭವಿಗಳೋ ಅಷ್ಟು ವಿಚಾರಿಗಳು ಆಗಿರುವುದರಿಂದ ಇವರ ಕೃತಿಗಳಲ್ಲಿ ರಾಗದ ಭಾಗದ ಬದಿಗೆ ಬುದ್ದಿಯ ಭಾಗ ಸಮಸಮನಾಗಿ ನಡೆಯುತ್ತದೆ. ಎಲ್ಲಿಯೇ ಆಗಲೀ ಕವಿ ತತ್ವವನ್ನು ಬಿಟ್ಟು ಮಾತನಾಡಿದನೋ ಎಂದು ಶಂಕೆ ಬರುವುದಿಲ್ಲ’ ಎಂದು ಮುನ್ನುಡಿಯಲ್ಲಿ ಮಾಸ್ತಿಯವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
