ನಿಮ್ಮಂತೆ ನೀವಿರಿ / Nimmante Neeviri
Author:MR Guruprasad
Pages:124
Edition: 2025
Book Size: 1/8th Deemy
Binding: Paper Back
Publisher:Amulya Pustaka Praksahana
Description
ನಿಮ್ಮಂತೆ ನೀವಿರಿ / Nimmante Neeviri – ಈ ಪುಸ್ತಕದ ಆಗುವಿಕೆಗೆ ಒಂದು ಅನನ್ಯತೆ ಇದೆ ಎಂಬುದು ನನ್ನ ತಿಳಿವಳಿಕೆ. ನಮ್ಮೆಲ್ಲರಂತೆ ಮಧ್ಯಮವರ್ಗದ ಬದುಕಿನ ಏಳುಬೀಳಿನ ಹಾದಿಯಲ್ಲೇ ನಡೆಯುತ್ತಾ ಬಂದವರು ರೂಪಾ-ಗುರುಪ್ರಸಾದ್. ಆದರೆ ಬದುಕು ಕೆಲವೊಮ್ಮೆ ಯಾಕೋ ಇವರನ್ನು ಮಾತ್ರ ಏಕ್ದಂ ಮುಳ್ಳಿನ ಹಾದಿಗೆ ಎಳೆದೊಯ್ದು ನಿಲ್ಲಿಸಿಬಿಡುತ್ತದೆ. ಹಾಗೆಂದು ಕುಸಿದು ಕುಗ್ಗಿ ಸೋತುಹೋಗಲಿಲ್ಲ ಇವರು. ಯಾತನೆಗಳನ್ನೆಲ್ಲ ಆಪೋಶನ ತೆಗೆದುಕೊಂಡು ಮುಗುಮ್ಮಾಗಿ ನಿಲ್ಲಬಲ್ಲ ಅಸಾಮಾನ್ಯೆ ರೂಪ. ಅಸಹನೀಯ ನೋವನ್ನೂ ತಮ್ಮ ಎಂದಿನ ಶೈಲಿಯಲ್ಲಿ, ‘ಅಷ್ಟೇ, ಇನ್ನೇನಿಲ್ಲ’ ಎಂದು ಲಘುವಾಗಿಸಿಬಿಡಬಲ್ಲ ಅಗಾಧ ಧಾರಣಶಕ್ತಿ ಗುರುಪ್ರಸಾದ್ದ್ದು. ಇಂತಹ ಇವರಿಬ್ಬರೂ ಕಹಿಯಾಗಿಸಿಬಿಡಬೇಕಾಗಿದ್ದ ತಮ್ಮ ಬದುಕಿನ ಅನುಭವವಗಳನ್ನು ಅವಕಾಶವಾಗಿ ಸ್ವೀಕರಿಸಿದ್ದಾರೆ. ಅನುಭವದ ಒಂದು ಹನಿಯನ್ನೂ ವ್ಯರ್ಥವಾಗಿ ಹೋಗಲು ಬಿಡದೆ ವಿವೇಕದ ಚಿಪ್ಪಿನಲ್ಲಿ ಮುಚ್ಚಿಟ್ಟು ಕಾವು ಕೊಟ್ಟಿದ್ದಾರೆ. ಯಾವ ಚಿಪ್ಪಿನಲ್ಲಿ ಎಂತಹ ಮುತ್ತು ಅರಳಿ ಬಂದೀತೋ ಎಂದು ತಾಳ್ಮೆಯಿಂದ ಕಾದಿದ್ದಾರೆ. ಸಿಕ್ಕ ಮುತ್ತುಗಳನ್ನೆಲ್ಲಾ ಹುಷಾರಾಗಿ ಹೆಕ್ಕಿ ತೆಗೆದು, ಒಂದೊಂದಾಗಿ ಪೋಣಿಸಿ ‘ನಿಮ್ಮಂತೆ ನೀವಿರಿ’ ಪುಸ್ತಕವಾಗಿಸಿದ್ದಾರೆ.
ರೂಪಾ-ಗುರುಪ್ರಸಾದ್ ಅನುಭವದ ಮೂಸೆಯಿಂದ ಮೂಡಿಬಂದ ಈ ಪುಸ್ತಕ ನಮ್ಮೆಲ್ಲರ ಬದುಕಿನ ಜೊತೆ ಹಾಸುಹೊಕ್ಕಿನಂತೆ ಬೆಸೆದುಕೊಂಡುಬಿಡುವುದೇ ಒಂದು ಸೋಜಿಗ. ಇಲ್ಲಿನ ಒಂದೇ ಒಂದು ಅನುಭವವೂ ನಮಗೆ ಸಂಬಂಧವಿಲ್ಲದ್ದು ಅನ್ನಿಸುವುದೇ ಇಲ್ಲ. ಇವರ ಈ ಚಿಂತನ-ಮಂಥನಕ್ಕೆ ಎರಡು-ಮೂರು ತಲೆಮಾರುಗಳಿಗೆ ಸಲ್ಲುವ ಅನುಭವದ ಸಾಮಗ್ರಿ ಇದೆ. ಬದುಕಲ್ಲಿ ಮುಂದೆ ಸಾಗಿ ಬಂದವರಿಗೆ ತಮ್ಮ ಜೀವನದಲ್ಲಿ ಗಲಿಬಿಲಿಗೊಂಡ, ಅರ್ಥವಾಗದೆ ನಿಸ್ಸಹಾಯಕರಾಗಿ ಪರದಾಡಿದ ಸನ್ನಿವೇಶಗಳೆಲ್ಲಾ ಕಣ್ಮುಂದೆ ಬಂದು, ‘ಅಯ್ಯೋ, ನನಗೂ ಇದೇ ಅನುಭವವಾಗಿತ್ತಲ್ಲ, ನನಗ್ಯಾಕೆ ಇದೆಲ್ಲಾ ಹೊಳೆಯಲಿಲ್ಲ’ ಎಂದು ನಿಡುಸುಯ್ಯುವಂತಾಗುತ್ತದೆ. ಇಂದಿನ ಯುವಜನರಿಗೆ, ‘ಅಯ್ಯೋ, ಏನೋ ಮಾಡಲು ಹೋಗಿ ಏನೋ ಮಾಡಿಬಿಡುತ್ತಿದ್ದೆನಲ್ಲ, ಸದ್ಯ ಪಾರಾದೆ’ ಎಂದು ನಿರಾಳವಾಗುವಂತಾಗುತ್ತದೆ. ಇನ್ನೂ ಮುಂದಡಿ ಇಡಬೇಕಾದ ಮಕ್ಕಳಿಗಂತೂ ಮುಂದೆ ದೀಪದ ಬೆಳಕೇ ಪ್ರಕಾಶಿಸುತ್ತದೆ. ‘ಜೀವನದಲ್ಲಿ ಅದ್ಭುತಗಳು ಸಂಭವಿಸುವುದಿಲ್ಲ, ಜೀವನವೇ ಒಂದು ಅದ್ಭುತ ಎಂದು ಸ್ವೀಕರಿಸಿದಾಗ ನಿಮ್ಮಂತೆ ನೀವಿರಿರುತ್ತೀರಿ. ನಿಮ್ಮಂತೆ ನೀವಿದ್ದಾಗ ಆನಂದದ ಸುಖಭೋಗ ನಿಮ್ಮ ಕೈನಿಲುಕಿನಲ್ಲೇ ಸುಳಿದಾಡುತ್ತಿರುತ್ತದೆ’. ರೂಪಾ-ಗುರುಪ್ರಸಾದರ ಸ್ನೇಹಮಯ ಬರವಣಿಗೆಯ ಶೈಲಿ ಪುಸ್ತಕವನ್ನು ಕೊನೆಯವರೆಗೂ ಬಿಡದೆ ಓದಿಸಿಕೊಳ್ಳುತ್ತದೆ. ಮಾತು ಹೆಚ್ಚಾದ ತಕ್ಷಣ ಕುತೂಹಲ ಕೆರಳಿಸುವ ಕತೆಯೊಂದನ್ನು ಎಳೆದು ತರುವ ರೀತಿಯಂತೂ ಇನ್ನೂ ಖುಷಿ ಕೊಡುತ್ತದೆ. ಹೀಗೆ ವಸ್ತು, ಭಾಷೆ, ಶೈಲಿ ಎಲ್ಲವೂ ಜನಮುಖಿಯಾಗಿರುವುದೇ ಈ ಪುಸ್ತಕದ ವೈಶಿಷ್ಟ್ಯ. ಈ ಪುಸ್ತಕವನ್ನು ಓದುತ್ತಾ ಅರಿವಿಗೆ ಬಾರದಂತೆಯೇ ಓದುಗರ ಒಳಗೊಂದು ಬದಲಾವಣೆಯ ಪ್ರಕ್ರಿಯೆ ಪ್ರಾರಂಭವಾಗದಿದ್ದರೆ ಕೇಳಿ. ಇದಕ್ಕಾಗಿ ರೂಪಾ-ಗುರುಪ್ರಸಾದ್ ನಿಜಕ್ಕೂ ಅಭಿನಂದನೀಯರು.
