ಮರಳಿ ಮಣ್ಣಿಗೆ / Marali Mannige
Author: Dr.K. Shivarama Karantha
Pages: 421
Edition: 2025
Book Size: 1/8th Demmy
Binding: Hard Bound
Publisher: Sapna Book House
Specification
Description
ಮರಳಿ ಮಣ್ಣಿಗೆ / Marali Mannige – ‘ಮರಳಿ ಮಣ್ಣಿಗೆ’ ಎಂಬುದು ಶಿವರಾಮ ಕಾರಂತರ ಕಾದಂಬರಿ. ಆಂಗ್ಲ ಕಾದಂಬರಿಕಾರ್ತಿ ಪರ್ಲ್ ಬಕ್ ಎಂಬಾಕೆಯ ’ಗುಡ್ ಅರ್ಥ್’ ಕಾದಂಬರಿ ಓದಿ ಪ್ರೇರಿತರಾಗಿ ಕಾರಂತರು ಈ ಕಾದಂಬರಿ ರಚಿಸಿದ್ದಾರೆ. ಮೂರು ತಲೆಮಾರುಗಳ ಕಥಾನಕವನ್ನುಹೊಂದಿದೆ. ಈ ಮಧ್ಯೆ ಕಂಡು ಬರುವ ಆರ್ಥಿಕ ಸಾಮಾಜಿಕ ಬದಲಾವಣೆಯ ಸ್ವರೂಪವೇ ಕಾದಂಬರಿಯ ಮೂಲ ವಸ್ತು. ರಾಷ್ಟ್ರೀಯ ಚಳವಳಿಯ ಕಾವು ಕತೆಯ ಮೂರನೇ ತಲೆಮಾರಿನ ಚಿತ್ರಣದಲ್ಲಿ ಕಾಣಿಸಿಕೊಂಡಿದೆಯಲ್ಲದೆ, ಈ ಚಳವಳದಲ್ಲಿ ಪಾಲುಗೊಂಡಿದ್ದ ಕಾರಂತರು ತಾವೇ ಒಂದು ಪ್ರಮುಖ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ಬಡತನ, ಕೌಟುಂಬಿಕ ಸಂಕಟಗಳ ನಡುವೆಯೂ ಜೀವನದ ಇತ್ಯಾತ್ಮಕ ಮೌಲ್ಯಗಳನ್ನೇ ಬಾಳಿನ ಸಾರ್ಥಕತೆಯ ಸಾರಸರ್ವಸ್ವವೆಂದು ನಂಬಿ ಬಾಳಿದ ಮನುಷ್ಯ ಜೀವಿಗಳ ಹೋರಾಟ, ಆಧುನಿಕ ಜೀವನದ ಶೋಕಿಗೆ ಮರುಳಾಗಿ ಅನೈತಿಕ ನಡತೆಗಳಿಂದ ಬದುಕನ್ನು ಸಾಗಿಸಿ, ಬಿರುಗಾಳಿಗೆ ಸಿಲುಕಿದ ಹಡಗಿನಂತೆ – ಹೊಯ್ದಾಟದ ದುರಂತ ಜೀವನಕ್ಕೆ ತುತ್ತಾದ ವ್ಯಕ್ತಿಗಳ ಕತೆ, ರಾಷ್ಟ್ರೀಯ ಚಳವಳಿಯ ಅಲೆಯಲ್ಲಿ ಎಲ್ಲೆಲ್ಲೋ ಕೊಚ್ಚಿಕೊಂಡು ಹೋಗಿ, ಗುರಿಸಾಧಿಸಲು ವಿಫಲನಾಗಿ, ಕೊನೆಗೂ ಹುಟ್ಟಿದ ನೆಲಕ್ಕೆ ಮರಳಿಬಂದು, ದುಡಿದು ಜೀವಿಸಲು ನಿರ್ಧರಿಸಿದ ಕಥಾನಾಯಕ ರಾಮನ ಕಥೆಯೆ ಈ ಕಾದಂಬರಿ. ದಕ್ಷಿಣ ಕನ್ನಡ ಜಿಲ್ಲೆಯ ಪಡು ಕರಾವಳಿಯಲ್ಲಿರುವ ಕೋಡಿ ಎಂಬ ಹಳ್ಳಿಯೇ ಕಾದಂಬರಿಯ ಕೇಂದ್ರ. ರಾಮೈತಾಳರಿಗೆ ಪಾರೋತಿ ಹಾಗೂ ಸತ್ಯಭಾಮೆ-ಇಬ್ಬರು ಪತ್ನಿಯರು. ಅಕ್ಕ ಸರಸೋತಿ ವಿಧವೆ. ಸತ್ಯಭಾಮೆಗೆ ಲಚ್ಚ ಮತ್ತು ಸುಬ್ಬಿ-ಮಕ್ಕಳು. ಬಡತನದ ಮಧ್ಯೆ ಸಂಸಾರ ಸಾಗುತ್ತದೆ. ಇಂಗ್ಲಿಷ್ ವಿದ್ಯಾಭ್ಯಾಸ ಕಲಿತಿದ್ದರೂ ಮಗ ಲಚ್ಚ ದುರ್ವ್ಯಸನಿ. ರಾಮೈತಾಳರು ಸೊಸೆಯ (ನಾಗವೇಣಿ) ಹೆಸರಿಗೆ ಆಸ್ತಿ ಬರೆದು ಸಾಯುತ್ತಾರೆ. ಇದನ್ನು ಸಹಿಸದ ಮಗ ಲಚ್ಚ, ಆಸ್ತಿಯನ್ನು ಸವೆಸಿ, ಹೆಂಡತಿ ಮಕ್ಕಳನ್ನು ಅಬ್ಬೇಪಾರಿ ಮಾಡುತ್ತಾನೆ. ಸೊಸೆ ನಾಗವೇಣಿ ಸಹನೆಯಿಂದ ಎಲ್ಲ ಕಷ್ಟ ಸಹಿಸುತ್ತಾಳೆ. ನಾಗವೇಣಿಯ ಮಗ ರಾಮ, ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಾನೆ. ವಿದ್ಯಾಭ್ಯಾಸ ಮೊಟಕುಗೊಳ್ಳುತ್ತದೆ. ನಿರುದ್ಯೋಗಿಯಾಗಿದ್ದ ರಾಮನ ಕಂಡು ನಾಗವೇಣಿ ಬೇಸರಿಸಿಕೊಳ್ಳುತ್ತಾಳೆ. ಮುಂಬೈಯಲ್ಲಿದ್ದು, ತಾನು ಕಲಿತಿದ್ದ ಅಲ್ಪಸ್ವಲ್ಪ ಸಂಗೀತ ಪಾಠ ಹೇಳಿಕೊಂಡು ರಾಮ ಜೀವನ ಸಾಗಿಸುತ್ತಾನೆ. ಈ ಮಧ್ಯೆ ತಾಯಿ ನಾಗವೇಣಿಯ ಪತ್ರ ಬಂದು, ರಾಮೈತಾಳರು (ಅಜ್ಜ) ಗೋಡೆಯಲ್ಲಿ ಇರಿಸಿದ್ದ ನಿಧಿಯ ಕುರಿತು ಬರೆದಿರುವ ವಿಷಯ ಕಂಡು ಆತ ಊರಿಗೆ ಮರಳುತ್ತಾನೆ. ತಾಯಿಯೊಂದಿಗೆ ಸಹಕರಿಸುತ್ತಾನೆ ಎಂಬುದು ಕಾದಂಬರಿಯ ವಸ್ತು.
